ಸಿದ್ದಾಪುರ: ಧಾರ್ಮಿಕ ಕೇಂದ್ರಗಳ ಮೂಲಕ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಯಾಗಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.
ತಾಲೂಕಿನ ಕವಂಚೂರು ಗ್ರಾಮ ಪಂಚಾಯತ ವ್ಯಾಪ್ತಿಯ ಶಿರಡಿ ಸಾಯಿ ಭಿಕ್ಷಾ ಕೇಂದ್ರಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿ, ಶಿರಡಿ ಸಾಯಿ ಭಿಕ್ಷಾ ಕೇಂದ್ರ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು. ಭಿಕ್ಷಾ ಕೇಂದ್ರದ ಶ್ರೀಲಕ್ಷ್ಮೀ ಶ್ರೀನಿವಾಸ ಗುರೂಜಿ ಮಾತನಾಡಿ, ಇತ್ತೀಚೆಗೆ ನಮಗೆ ವಿದ್ಯೆ, ಬುದ್ಧಿ, ಹಣ ಎಲ್ಲಾ ಇದೆ. ಆದರೆ ಸಂಸ್ಕಾರವಿಲ್ಲ. ಕರ್ನಾಟಕದಲ್ಲಿ ಕೇಂದ್ರದ 30 ಶಾಖೆಗಳಿವೆ. ಇದನ್ನು ಜ್ಞಾನಧಾಮವನ್ನಾಗಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಗುರಿ ಹೊಂದಿದ್ದೇವೆ. ಹುಟ್ಟಿದ ತಪ್ಪಿಗಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಶಿರಡಿ ಸಾಯಿ ಭಿಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 64 ವಿದ್ಯೆಗಳನ್ನು ಉಚಿತವಾಗಿ ಕಲಿಸುವ ಕೇಂದ್ರ ಇದಾಗಲಿದೆ ಎಂದರು.
ಕವಂಚೂರು ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಜಿಡ್ಡಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಮನಮನೆ ಗ್ರಾಪಂ ಅಧ್ಯಕ್ಷ ನಾಗರಾಜ ಕುಂಬ್ಳೆ, ಕವಂಚೂರ ಗ್ರಾಪಂ ಸದಸ್ಯರಾದ ಚಂದ್ರಕಾಂತ ನಾಯ್ಕ, ಜಿ.ಟಿ.ನಾಯ್ಕ ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಹರಿಹರ ಹರಿಕಾಂತ ಸ್ವಾಗತಿಸಿದರು.